ಉಡುಪಿ ಶೆಟ್ಟಿಬೆಟ್ಟು ವನದುರ್ಗಾ ಕ್ಷೇತ್ರ ಮಹಾತ್ಮೆ ಪ್ರಸಂಗ ರಚನೆಗೆ ವೀಳ್ಯ ಪ್ರದಾನ
Wednesday, August 19, 2026
ಅತ್ಯಂತ ಕಾರಣಿಕ ಕ್ಷೇತ್ರವಾಗಿ ಬೆಳೆಯುತ್ತಿರುವ ಪರ್ಕಳ ಸಮೀಪದ ಶೆಟ್ಟಿಬೆಟ್ಟು ನಡುಮನೆ ವನದುರ್ಗಾ ಕ್ಷೇತ್ರದ ಮಹಾತ್ಮೆಯನ್ನು ಆಧರಿಸಿ ಯಕ್ಷಗಾನ ಪ್ರಸಂಗವೊಂದು ರಚನೆಯಾಗಲಿದೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಪ್ರಸಂಗಕರ್ತ ಪಿ.ವಿ. ಆನಂದ ಸಾಲಿಗ್ರಾಮ ಅವರಿಗೆ ಶ್ರೀ ಕ್ಷೇತ್ರದಲ್ಲಿ ಆಗಸ್ಟ್ 18ರಂದು ಧರ್ಮದರ್ಶಿ ಶೆಟ್ಟಿಬೆಟ್ಟು ನಡುಮನೆ ಅಮಿತಾ ಆರ್. ಹೆಗ್ಡೆ ಅವರು ಅಧಿಕೃತವಾಗಿ ವೀಳ್ಯ ಪ್ರದಾನ ಮಾಡಿದರು.
ಪಿ.ವಿ. ಆನಂದ ಸಾಲಿಗ್ರಾಮ ಅವರು ಈಗಾಗಲೇ ಕ್ಷೇತ್ರದ ಇತಿಹಾಸ, ಮಹತ್ವ ಹಾಗೂ ಕಾರಣಿಕತೆ ಕುರಿತು ಮಾಹಿತಿಯನ್ನು ಸಂಗ್ರಹಿಸಿದ್ದು, ತಮ್ಮ 71ನೇ ಪ್ರಸಂಗವಾಗಿ ‘ಶಕ್ತಿ ಸ್ವರೂಪಿಣಿ ಶೆಟ್ಟಿಬೆಟ್ಟು ನಡುಮನೆ ವನದುರ್ಗಾ ಕ್ಷೇತ್ರ ಮಹಾತ್ಮೆ’ ಎಂಬ ಯಕ್ಷಗಾನ ಪ್ರಸಂಗವನ್ನು ರಚಿಸಲಿದ್ದಾರೆ. ಪ್ರಸಂಗವು ಪ್ರಸಕ್ತ ಸಾಲಿನಲ್ಲಿ ರಂಜಿತ್ ಕುಮಾರ್ ಶೆಟ್ಟಿ ಯಜಮಾನಿಕೆಯ ಬಡಗಿನ ಖ್ಯಾತ ಹಟ್ಟಿಯಂಗಡಿ ಮೇಳದಲ್ಲಿ ಅದ್ಧೂರಿಯಾಗಿ ಪ್ರದರ್ಶನಗೊಳ್ಳುವ ನಿರೀಕ್ಷೆಯಿದೆ.
ವೀಳ್ಯ ಪ್ರದಾನ ಕಾರ್ಯಕ್ರಮದಲ್ಲಿ ಸಂತೋಷ್ ಆರ್. ಹೆಗ್ಡೆ ಶೆಟ್ಟಿಬೆಟ್ಟು ನಡುಮನೆ, ಎಸ್. ಸಂತೋಷ್ ಹೆಗ್ಡೆ, ಸುಹಾಸಿನಿ ಹೆಗ್ಡೆ, ನಿಧಿ ಹೆಗ್ಡೆ, ನಳಿನಿ ಶೆಟ್ಟಿ, ಶಶಿ ಶೆಟ್ಟಿ, ಲೋಕಾಕ್ಷಿ ಶೆಟ್ಟಿ, ಉಮೇಶ್ ನಾಯಕ್, ಶಿವರಾಮ ನಾಯಕ್, ಮಹೇಶ್ ಪೂಜಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಶೆಟ್ಟಿಬೆಟ್ಟು ನಡುಮನೆ ವನದುರ್ಗಾ ಕ್ಷೇತ್ರದ ಮಹಾತ್ಮೆಯನ್ನು ಯಕ್ಷಗಾನದ ಮೂಲಕ ಜನರಿಗೆ ಪರಿಚಯಿಸುವ ಈ ಪ್ರಯತ್ನ ಭಕ್ತರು ಹಾಗೂ ಕಲಾಭಿಮಾನಿಗಳಲ್ಲಿ ವಿಶೇಷ ನಿರೀಕ್ಷೆ ಮೂಡಿಸಿದೆ.
