Dharmasthala: ಸರಣಿ ಶವಗಳ ಹೂತಿರುವ ಪ್ರಕರಣ; ಎಸ್ಐಟಿಯಿಂದ ಸ್ಥಳ ಮಹಜರಿಗೆ ಸಿದ್ಧತೆ
Monday, July 28, 2025
ಧರ್ಮಸ್ಥಳದಲ್ಲಿ ಸರಣಿ ಶವಗಳ ಹೂತಿರುವ ಪ್ರಕರಣಕ್ಕೆ ಸಂಬ0ಧಿಸಿ ಎಸ್ಐಟಿ ತಂಡವು ತನಿಖೆಯನ್ನು ಮುಂದುವರಿಸಿದೆ. ಕಳೆದ ಎರಡು ದಿನಗಳಿಂದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡದ ಹಿರಿಯ ಅಧಿಕಾರಿಗಳು, ಜುಲೈ 28ರಂದು ಸ್ಥಳ ಮಹಜರು ನಡೆಸಲಿದ್ದಾರೆ. ತಲೆಬುರುಡೆಯನ್ನು ತೆಗೆದಿರುವ ಜಾಗದಲ್ಲಿ ಎಸ್.ಐ.ಟಿ ಅಧಿಕಾರಿಗಳು ದೂರುದಾರನ ಜೊತೆ ತೆರಳಿ ಸ್ಥಳ ಮಹಜರು ನಡೆಸಲಿದ್ದಾರೆ.
ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮತ್ತು ಎಸ್ಪಿ ಸಿ.ಎ.ಸೈಮನ್ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದು, ಬೆಳ್ತಂಗಡಿ ಎಸ್.ಐ.ಟಿ ಕಚೇರಿಯ ಮುಂದೆ ಅರಣ್ಯ ಇಲಾಖೆಯ ರೇಂಜರ್ ತ್ಯಾಗರಾಜ್ ಮಹಜರಿಗೆ ತಯಾರಿ ನಡೆಸುತ್ತಿದ್ದಾರೆ. ಮೊದಲು ಬೆಳ್ತಂಗಡಿ ಕಚೇರಿಗೆ ಬಂದ ಎಸ್.ಐ.ಟಿ ಅಧಿಕಾರಿಗಳು ದೂರುದಾರನನ್ನು ಕರೆಸಿಕೊಂಡಿದ್ದು, ಕೆಲವು ದಾಖಲೆಗಳಿಗೆ ದೂರುದಾರನ ಸಹಿ ಹಾಕಿ ಬಳಿಕ ಬಿಗಿ ಭದ್ರತೆಯಲ್ಲಿ ಧರ್ಮಸ್ಥಳದಲ್ಲಿ ಬುರುಡೆ ತೆಗೆದ ಜಾಗಕ್ಕೆ ಹೋಗಿ ಮಹಜರು ನಡೆಸಲಿದ್ದಾರೆ.
ಕಂದಾಯ ಇಲಾಖೆ, ಸರ್ವೆ ಇಲಾಖೆ, ಐ.ಎಸ್.ಡಿ (ಅಂತರಿಕ ಭದ್ರತಾ ವಿಭಾಗ), ಎಫ್.ಎಸ್.ಲ್ ವಿಭಾಗದ ಸೋಕೋ ಸಿಬ್ಬಂದಿ, ಅರಣ್ಯ ಇಲಾಖೆಯ ತಂಡ ಮಹಜರಿಗೆ ಸಜ್ಜಾಗಿದೆ ಎಂದು ತಿಳಿದು ಬಂದಿದೆ.

